unfoldingWord 49 - ದೇವರ ಹೊಸ ಒಡಂಬಡಿಕೆ
Anahat: Genesis 3; Matthew 13-14; Mark 10:17-31; Luke 2; 10:25-37; 15; John 3:16; Romans 3:21-26, 5:1-11; 2 Corinthians 5:17-21; Colossians 1:13-14; 1 John 1:5-10
Komut Dosyası Numarası: 1249
Dil: Kannada
Kitle: General
Amaç: Evangelism; Teaching
Features: Bible Stories; Paraphrase Scripture
Durum: Approved
Komut dosyaları, diğer dillere çeviri ve kayıt için temel yönergelerdir. Her bir farklı kültür ve dil için anlaşılır ve alakalı hale getirmek için gerektiği gibi uyarlanmalıdırlar. Kullanılan bazı terimler ve kavramlar daha fazla açıklamaya ihtiyaç duyabilir veya hatta tamamen değiştirilebilir veya atlanabilir.
Komut Dosyası Metni
ದೇವದೂತನು ಕನ್ಯೆಯಾದ ಮರಿಯಳಿಗೆ, ನೀನು ದೇವರ ಮಗನಿಗೆ ಜನ್ಮ ನೀಡುವಿ ಎಂದು ಹೇಳಿದನು. ಅವಳು ಇನ್ನೂ ಕನ್ನಿಕೆಯಾಗಿದ್ದಳು, ಆದರೆ ಪವಿತ್ರಾತ್ಮನು ಅವಳ ಮೇಲೆ ಇಳಿದು ಬಂದು ಅವಳು ಗರ್ಭಿಣಿಯಾಗುವಂತೆ ಮಾಡಿದನು. ಅವಳು ಗಂಡುಮಗುವಿಗೆ ಜನ್ಮ ನೀಡಿ ಆತನಿಗೆ ಯೇಸು ಎಂದು ಹೆಸರಿಟ್ಟಳು. ಆದ್ದರಿಂದ ಯೇಸು ದೇವರೂ ಮತ್ತು ಮನುಷ್ಯನೂ ಆಗಿದ್ದಾನೆ.
ಯೇಸು ತಾನು ದೇವರೆಂದು ತೋರ್ಪಡಿಸುವಂಥ ಅನೇಕ ಅದ್ಭುತಗಳನ್ನು ಮಾಡಿದನು. ಆತನು ನೀರಿನ ಮೇಲೆ ನಡೆದನು ಮತ್ತು ಬಿರುಗಾಳಿಯನ್ನು ನಿಲ್ಲಿಸಿದನು. ಆತನು ಅನೇಕ ರೋಗಿಗಳನ್ನು ಗುಣಪಡಿಸಿದನು ಮತ್ತು ಇತರ ಅನೇಕರಿಂದ ದೆವ್ವಗಳನ್ನು ಬಿಡಿಸಿದನು. ಆತನು ಸತ್ತವರನ್ನು ಬದುಕಿಸಿದನು ಮತ್ತು ಆತನು ಐದು ರೊಟ್ಟಿಯನ್ನೂ ಎರಡು ಸಣ್ಣ ಮೀನುಗಳನ್ನೂ 5,000 ಜನರಿಗೆ ಪೋಷಿಸಲು ಬೇಕಾದಷ್ಟು ಆಗುವಂತೆ ಮಾರ್ಪಡಿಸಿದನು.
ಯೇಸು ಶ್ರೇಷ್ಠ ಬೋಧಕನು ಸಹ ಆಗಿದ್ದನು. ಆತನು ಬೋಧಿಸಿದ್ದೆಲ್ಲವನ್ನು, ಆತನು ಸರಿಯಾಗಿಯೇ ಬೋಧಿಸಿದನು. ಆತನು ದೇವರ ಮಗನಾಗಿರುವುದ್ದರಿಂದ ಆತನು ಏನು ಮಾಡಬೇಕೆಂದು ಜನರಿಗೆ ಹೇಳಿದನ್ನೋ ಅದನ್ನು ಅವರು ಮಾಡಲೇಬೇಕು. ಉದಾಹರಣೆಗೆ, ನೀವು ನಿಮ್ಮನ್ನು ಪ್ರೀತಿಸಿಕೊಳ್ಳುವ ಹಾಗೆಯೇ ಇತರ ಜನರನ್ನು ಸಹ ಪ್ರೀತಿಸಬೇಕು ಎಂದು ಆತನು ಬೋಧಿಸಿದನು.
ನೀವು ನಿಮ್ಮ ಆಸ್ತಿಯನ್ನಾಗಲಿ, ಬೇರೆ ಯಾವುದನ್ನಾಗಲಿ ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನೀವು ದೇವರನ್ನು ಪ್ರೀತಿಸಬೇಕು ಎಂದು ಆತನು ಬೋಧಿಸಿದನು.
ಈ ಲೋಕದಲ್ಲಿ ಬೇರೆ ಎಲ್ಲವನ್ನೂ ಗಳಿಸಿಕೊಳ್ಳುವುದಕ್ಕಿಂತ ದೇವರ ರಾಜ್ಯದಲ್ಲಿ ಇರುವುದು ಉತ್ತಮವೆಂದು ಸಹ ಯೇಸು ಹೇಳಿದನು. ನೀವು ಆತನ ರಾಜ್ಯವನ್ನು ಸೇರಬೇಕಾದರೆ ದೇವರು ತಾನೇ ನಿಮ್ಮನ್ನು ನಿಮ್ಮ ಪಾಪಗಳಿಂದ ರಕ್ಷಿಸಬೇಕು.
ಯೇಸು ಅವರಿಗೆ ಸ್ವಲ್ಪ ಜನರು ಮಾತ್ರವೇ ತನ್ನನ್ನು ಅಂಗೀಕರಿಸಿಕೊಳ್ಳುತ್ತಾರೆ ಇನ್ನು ಕೆಲವರು ಆತನನ್ನು ಅಂಗಿಕರಿಸುವುದಿಲ್ಲ , ಮತ್ತು ತನ್ನನ್ನು ಅಂಗಿಕರಿಸುವ ಜನರನ್ನು ದೇವರು ರಕ್ಷಿಸುತ್ತಾನೆ ಎಂದು ಹೇಳಿದನು. ಕೆಲವರು ಒಳ್ಳೆಯ ಮಣ್ಣಿನಂತೆ ಇದ್ದಾರೆ, ಏಕೆಂದರೆ ಅವರು ಯೇಸುವಿನ ಸುವಾರ್ತೆಯನ್ನು ಸ್ವೀಕರಿಸಿಕೊಳ್ಳುತ್ತಾರೆ ಮತ್ತು ದೇವರು ಅವರನ್ನು ರಕ್ಷಿಸುತ್ತಾನೆ ಎಂದು ಸಹ ಹೇಳಿದನು. ಆದರೆ ಇತರ ಜನರು ದಾರಿಯಲ್ಲಿರುವ ಗಡುಸಾದ ಮಣ್ಣಿನಂತೆ ಇದ್ದಾರೆ. ದೇವರ ವಾಕ್ಯವು ದಾರಿಯಲ್ಲಿ ಬೀಳುವ ಬೀಜದಂತೆ ಇದೆ, ಆದರೆ ಅಲ್ಲಿ ಏನೂ ಬೆಳೆಯುವುದಿಲ್ಲ. ಈ ಜನರು ಯೇಸುವಿನ ಕುರಿತಾದ ಸಂದೇಶವನ್ನು ತಿರಸ್ಕರಿಸುತ್ತಾರೆ. ಅವರು ಆತನ ರಾಜ್ಯದಲ್ಲಿ ಸೇರಲು ನಿರಾಕರಿಸುತ್ತಾರೆ.
ದೇವರು ಪಾಪಿಗಳನ್ನು ಹೆಚ್ಚಾಗಿ ಪ್ರೀತಿಸುತ್ತಾನೆ, ಆತನು ಅವರನ್ನು ಕ್ಷಮಿಸಲು ಮತ್ತು ಅವರನ್ನು ತನ್ನ ಮಕ್ಕಳನ್ನಾಗಿ ಮಾಡಿಕೊಳ್ಳಲು ಬಯಸುತ್ತಾನೆ ಎಂದು ಯೇಸು ಬೋಧಿಸಿದನು.
ದೇವರು ಪಾಪವನ್ನು ದ್ವೇಷಿಸುತ್ತಾನೆ ಎಂದು ಸಹ ಯೇಸು ನಮಗೆ ಹೇಳಿದನು. ಆದಾಮ ಹವ್ವರು ಪಾಪಮಾಡಿದ್ದರಿಂದ, ಅವರ ಸಂತತಿಯವರು ಸಹ ಪಾಪ ಮಾಡುತ್ತಾರೆ. ಲೋಕದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಪಾಪ ಮಾಡಿ ದೇವರಿಂದ ದೂರವಾಗಿದ್ದಾನೆ. ಎಲ್ಲರೂ ದೇವರಿಗೆ ಶತ್ರುಗಳಾಗಿದ್ದಾರೆ.
ದೇವರು ಲೋಕದಲ್ಲಿರುವ ಎಲ್ಲರನ್ನು ಎಷ್ಟಾಗಿ ಪ್ರೀತಿಸಿದನೆಂದರೆ : ಆತನು ತನ್ನ ಒಬ್ಬನೇ ಮಗನನ್ನು ಈ ಲೋಕಕ್ಕೆ ಕೊಟ್ಟನು, ಆದ್ದರಿಂದ ಆತನನ್ನು ನಂಬುವವರನ್ನು ದೇವರು ಶಿಕ್ಷಿಸುವುದಿಲ್ಲ. ಆದರೆ ಅವರು ಆತನೊಂದಿಗೆ ನಿತ್ಯವಾಗಿ ಜೀವಿಸುವರು.
ನೀವು ಪಾಪಮಾಡಿದ್ದರಿಂದ ನೀವು ಸಾಯುವುದಕ್ಕೆ ಅರ್ಹರಾಗಿದ್ದೀರಿ. ದೇವರು ನಿಮ್ಮ ಮೇಲೆ ಕೋಪಗೊಳ್ಳುವುದು ಸರಿಯೇ, ಆದರೆ ಆತನು ಅದಕ್ಕೆ ಬದಲಿಗೆ ಯೇಸುವಿನ ಮೇಲೆ ಕೋಪಗೊಂಡನು. ಯೇಸುವನ್ನು ಶಿಲುಬೆಯ ಮರಣಕ್ಕೆ ಒಪ್ಪಿಸುವುದರ ದೇವರು ಆತನನ್ನು ಶಿಕ್ಷಿಸಿದನು.
ಯೇಸು ಪಾಪ ಮಾಡಲಿಲ್ಲ, ಆದರೂ ದೇವರು ತನ್ನನ್ನು ಶಿಕ್ಷಿಸಲು ಆತನು ಸಮ್ಮತಿಸಿದನು. ಆತನು ಸಾಯಲು ಒಪ್ಪಿಕೊಂಡನು. ಹೀಗೆ ಆತನು ನಿಮ್ಮ ಪಾಪಗಳನ್ನು ಮತ್ತು ಲೋಕದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಪಾಪಗಳನ್ನು ನಿವಾರಿಸುವಂಥ ಪರಿಪೂರ್ಣವಾದ ಯಜ್ಞವಾದನು. ಯೇಸು ತನ್ನನ್ನು ತಾನು ದೇವರಿಗೆ ಯಜ್ಞವಾಗಿ ಅರ್ಪಿಸಿದನು, ಆದ್ದರಿಂದ ದೇವರು ಯಾವುದೇ ಪಾಪವನ್ನಾಗಲಿ, ಎಂಥ ಘೋರ ಪಾಪಗಳನ್ನಾಗಲಿ ಕ್ಷಮಿಸುವನು.
ನೀವು ತುಂಬಾ ಒಳ್ಳೆ ಕೆಲಸಗಳನ್ನು ಮಾಡಿದರೂ, ಅದು ದೇವರು ನಿಮ್ಮನ್ನು ರಕ್ಷಿಸುವಂತೆ ಮಾಡುವುದಿಲ್ಲ. ಬೇರೆ ಯಾವ ಕಾರ್ಯಗಳನ್ನು ಮಾಡುವುದರ ಮೂಲಕ ನೀವು ಆತನಿಗೆ ಸ್ನೇಹಿತರಾಗಲು ಸಾಧ್ಯವಿಲ್ಲ. ಅದಕ್ಕೆ ಬದಲಾಗಿ, ಯೇಸು ದೇವರ ಮಗನೆಂದು, ಆತನು ನಿಮಗೆ ಬದಲಾಗಿ ಶಿಲುಬೆಯಲ್ಲಿ ಸತ್ತನು ಮತ್ತು ದೇವರು ಆತನನ್ನು ಜೀವಂತವಾಗಿ ಎಬ್ಬಿಸಿದನು ಎಂದು ನೀವು ನಂಬಬೇಕು. ಹೀಗೆ ನೀವು ನಂಬಿದರೆ ನೀವು ಮಾಡಿರುವ ಪಾಪವನ್ನು ದೇವರು ಕ್ಷಮಿಸುತ್ತಾನೆ.
ಯೇಸುವಿನಲ್ಲಿ ನಂಬಿಕೆಯಿಡುವ ಮತ್ತು ಆತನನ್ನು ತಮ್ಮ ಕರ್ತನನ್ನಾಗಿ ಅಂಗೀಕರಿಸಿಕೊಳ್ಳುವ ಎಲ್ಲರನ್ನು ದೇವರು ರಕ್ಷಿಸುತ್ತಾನೆ. ಆದರೆ ಆತನನ್ನು ನಂಬದವರನ್ನು ಆತನು ರಕ್ಷಿಸುವುದಿಲ್ಲ. ನೀವು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ ಪುರುಷರಾಗಿರಲಿ ಸ್ತ್ರೀಯಾಗಿರಲಿ, ವೃದ್ಧರಾಗಿರಲಿ ಅಥವಾ ಯುವಕರಾಗಿರಲಿ, ನೀವು ಎಲ್ಲೇ ಜೀವಿಸುತ್ತಿರಲಿ ಇದ್ಯಾವುದು ದೊಡ್ಡ ವಿಷಯವೇ ಅಲ್ಲ. ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನೀವು ಯೇಸುವಿನಲ್ಲಿ ನಂಬಿಕೆಯಿಡಬೇಕೆಂದು ಬಯಸುತ್ತಾನೆ, ಏಕೆಂದರೆ ಆದರ ಮೂಲಕ ಆತನು ನಿಮಗೆ ಸ್ನೇಹಿತನಾಗಲು ಬಯಸುತ್ತಾನೆ.
ನೀವು ಆತನನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಯೇಸು ನಿಮ್ಮನ್ನು ಕರೆಯುತ್ತಿದ್ದಾನೆ. ಯೇಸುವೇ ಮೆಸ್ಸೀಯನೂ, ದೇವರ ಒಬ್ಬನೇ ಮಗನೂ ಆಗಿದ್ದಾನೆಂದು ನೀವು ನಂಬುತ್ತೀರಾ? ನೀವು ಪಾಪಿಯಾಗಿದ್ದೀರಿ ಮತ್ತು ದೇವರು ನಿಮ್ಮನ್ನು ಶಿಕ್ಷಿಸಲು ನೀವು ಅರ್ಹರಾಗಿದ್ದೀರಿ ಎಂದು ನೀವು ನಂಬುತ್ತೀರಾ? ನಿಮ್ಮ ಪಾಪಗಳನ್ನು ನಿವಾರಿಸಲು ಯೇಸು ಶಿಲುಬೆಯಲ್ಲಿ ಸತ್ತನೆಂದು ನೀವು ನಂಬುತ್ತೀರಾ?
ನೀವು ಯೇಸುವನ್ನು ಮತ್ತು ಆತನು ನಿಮಗಾಗಿ ಮಾಡಿದ್ದನ್ನು ನಂಬಿದರೆ, ನೀವು ಕ್ರೈಸ್ತರಾಗುವಿರಿ! ಸೈತಾನನು ತನ್ನ ಕತ್ತಲೆಯ ರಾಜ್ಯದಲ್ಲಿ ಇನ್ನು ಮುಂದೆ ನಿಮ್ಮನ್ನು ಆಳುವದಿಲ್ಲ. ದೇವರು ಈಗ ತನ್ನ ಬೆಳಕಿನ ರಾಜ್ಯದಲ್ಲಿ ನಿಮ್ಮನ್ನು ಆಳುತ್ತಿದ್ದಾನೆ. ನೀವು ಹಿಂದೆ ಮಾಡುತ್ತಿದ್ದ ಹಾಗೆ ಪಾಪಮಾಡದಂತೆ ದೇವರು ನಿಮ್ಮನ್ನು ತಪ್ಪಿಸಿದ್ದಾನೆ. ಆತನು ನಿಮಗೆ ಹೊಸದಾದ, ಸರಿಯಾದ ಜೀವನಕ್ರಮವನ್ನು ದಯಪಾಲಿಸಿದ್ದಾನೆ.
ನೀನು ಕ್ರೈಸ್ತನಾಗಿದ್ದರೆ, ಯೇಸು ಮಾಡಿದ ಕಾರ್ಯದ ನಿಮಿತ್ತವಾಗಿ ದೇವರು ನಿನ್ನ ಪಾಪಗಳನ್ನು ಕ್ಷಮಿಸಿದ್ದಾನೆ. ಈಗ ದೇವರು ನಿನ್ನನ್ನು ಶತ್ರುವಾಗಿ ಅಲ್ಲ ಬದಲಾಗಿ ನಿನ್ನನ್ನು ಅಪ್ತ ಸ್ನೇಹಿತನಾಗಿ ಪರಿಗಣಿಸುತ್ತಾನೆ.
ನೀವು ದೇವರ ಸ್ನೇಹಿತರಾಗಿದ್ದರೆ ಮತ್ತು ಕರ್ತನಾದ ಯೇಸುವಿನ ಸೇವಕರಾಗಿದ್ದರೆ, ಯೇಸು ನಿಮಗೆ ಬೋಧಿಸುವುದನ್ನು ಅನುಸರಿಸಲು ನೀವು ಬಯಸುತ್ತೀರಿ. ನೀವು ಕ್ರೈಸ್ತರಾಗಿದ್ದರೂ ಕೂಡ, ಸೈತಾನನು ಪಾಪಮಾಡುವಂತೆ ನಿಮ್ಮನ್ನು ಪ್ರಲೋಭಿಸುತ್ತಾನೆ. ಆದರೆ ದೇವರು ತಾನು ಏನು ಮಾಡುತ್ತೇನೆಂದು ಹೇಳುತ್ತಾನೋ ಅದನ್ನು ಆತನು ಯಾವಾಗಲೂ ಮಾಡುತ್ತಾನೆ. ನೀವು ನಿಮ್ಮ ಪಾಪಗಳನ್ನು ಅರಿಕೆಮಾಡಿದರೆ ನಿಮ್ಮನ್ನು ಕ್ಷಮಿಸುವೆನು ಎಂದು ಆತನು ಹೇಳುತ್ತಾನೆ. ಪಾಪದ ವಿರುದ್ಧ ಹೋರಾಡಲು ಆತನು ನಿಮಗೆ ಬಲವನ್ನು ಕೊಡುವನು.
ನೀವು ಪ್ರಾರ್ಥಿಸಬೇಕೆಂದು ಮತ್ತು ತನ್ನ ವಾಕ್ಯವನ್ನು ಅಧ್ಯಯನ ಮಾಡಬೇಕೆಂದು ದೇವರು ನಿಮಗೆ ಹೇಳುತ್ತಾನೆ. ನೀವು ಇತರ ಕ್ರೈಸ್ತರೊಂದಿಗೆ ಸೇರಿ ಆತನನ್ನು ಆರಾಧಿಸಬೇಕೆಂದು ಸಹ ಆತನು ಹೇಳುತ್ತಾನೆ. ಆತನು ನಿಮಗಾಗಿ ಮಾಡಿರುವಂಥದ್ದನ್ನು ನೀವು ಬೇರೆ ಜನರಿಗೆ ಹೇಳಬೇಕು. ನೀವು ಈ ಎಲ್ಲಾ ಕಾರ್ಯಗಳನ್ನು ಮಾಡಿದರೆ, ನೀವು ಆತನ ಬಲವಾದ ಸ್ನೇಹಿತರಾಗುವಿರಿ.