unfoldingWord 24 - ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿದ ಯೋಹಾನನು
Esquema: Matthew 3; Mark 1; Luke 3; John 1:15-37
Número de guió: 1224
Llenguatge: Kannada
Públic: General
Propòsit: Evangelism; Teaching
Features: Bible Stories; Paraphrase Scripture
Estat: Approved
Els scripts són pautes bàsiques per a la traducció i l'enregistrament a altres idiomes. S'han d'adaptar segons sigui necessari perquè siguin comprensibles i rellevants per a cada cultura i llengua diferents. Alguns termes i conceptes utilitzats poden necessitar més explicació o fins i tot substituir-se o ometre completament.
Text del guió
ಜಕರೀಯ ಹಾಗೂ ಎಲಿಸಬೇತಳ ಮಗನಾದ ಯೋಹಾನನು ಬೆಳೆದು ಪ್ರವಾದಿಯಾದನು. ಅವನು ಅರಣ್ಯದಲ್ಲಿ ವಾಸವಾಗಿದ್ದು ಕಾಡುಜೇನನ್ನು ಮತ್ತು ಮಿಡತೆಗಳನ್ನು ತಿನ್ನುತ್ತಿದ್ದನು ಮತ್ತು ಒಂಟೆ ಕೂದಲಿನಿಂದ ಮಾಡಿದ ಬಟ್ಟೆಗಳನ್ನು ಧರಿಸಿದ್ದನು.
ಅನೇಕ ಜನರು ಯೋಹಾನನ ಉಪದೇಶವನ್ನು ಕೇಳಿಸಿಕೊಳ್ಳಲು ಅರಣ್ಯದ ಕಡೆಯಿಂದ ಬರುತ್ತಿದ್ದರು . ಅವನು ಅವರಿಗೆ ಉಪದೇಶಿಸುತ್ತಾ "ಪಶ್ಚಾತ್ತಾಪಪಡಿರಿ, ದೇವರ ರಾಜ್ಯವು ಸಮೀಪವಾಯಿತು" ಎಂದು ಹೇಳಿದನು.
ಜನರು ಯೋಹಾನನ ಸಂದೇಶವನ್ನು ಕೇಳಿದಾಗ, ಅವರಲ್ಲಿ ಅನೇಕರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟರು ಮತ್ತು ಯೋಹಾನನು ಅವರಿಗೆ ದೀಕ್ಷಾಸ್ನಾನ ಮಾಡಿಸಿದನು. ಅನೇಕ ಧಾರ್ಮಿಕ ಮುಖಂಡರು ಸಹ ಯೋಹಾನನ್ನು ನೋಡಲು ಬಂದರು, ಆದರೆ ಅವರು ಪಶ್ಚಾತ್ತಾಪಪಡಲಿಲ್ಲ ಅಥವಾ ತಮ್ಮ ಪಾಪಗಳನ್ನು ಒಪ್ಪಿಕೊಳ್ಳಲಿಲ್ಲ.
ಯೋಹಾನನು ಧಾರ್ಮಿಕ ಮುಖಂಡರಿಗೆ, "ನೀವು ವಿಷಪೂರಿತ ಸರ್ಪಗಳು! ಪಶ್ಚಾತ್ತಾಪಪಟ್ಟು ನಿಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಿರಿ, ದೇವರು ಒಳ್ಳೆಯ ಫಲಗಳನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು, ಅವುಗಳನ್ನು ಬೆಂಕಿಗೆ ಹಾಕುವನು" ಎಂದು ಹೇಳಿದನು., "ಇಗೋ, ನಾನು ನಿನ್ನ ಮುಂದೆ ನನ್ನ ದೂತನನ್ನು ಕಳುಹಿಸುತ್ತೇನೆ, ಅವನು ನಿನ್ನ ಮಾರ್ಗವನ್ನು ಸಿದ್ಧಪಡಿಸುವನು”.ಎಂದು ಪ್ರವಾದಿಗಳು ಹೇಳಿದ್ದ ಮಾತುಗಳನ್ನು ಯೋಹಾನನು ನೆರವೇರಿಸಿದನು
ಕೆಲವು ಧಾರ್ಮಿಕ ಮುಖಂಡರು ಯೋಹಾನನಿಗೆ, “ನೀನು ಮೆಸ್ಸೀಯನೋ?” ಎಂದು ಕೇಳಿದರು. ಯೋಹಾನನು, "ನಾನು ಮೆಸ್ಸೀಯನಲ್ಲ, ಆದರೆ ಆತನು ನನ್ನ ಹಿಂದೆ ಬರುತ್ತಾನೆ, ಆತನು ತುಂಬಾ ಶ್ರೇಷ್ಠನು. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ" ಎಂದು ಉತ್ತರ ಕೊಟ್ಟನು.
ಮರುದಿನ, ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಅವನ ಬಳಿಗೆ ಬಂದನು. ಯೋಹಾನನು ಆತನನ್ನು ನೋಡಿದಾಗ, "ಇಗೋ, ಲೋಕದ ಪಾಪವನ್ನು ನಿವಾರಣೆ ಮಾಡುವ ದೇವರ ಕುರಿಮರಿ" ಎಂದು ಹೇಳಿದನು.
ಯೋಹಾನನು ಯೇಸುವಿಗೆ, "ನಿನಗೆ ದೀಕ್ಷಾಸ್ನಾನ ಮಾಡಿಸುವುದಕ್ಕೆ ನಾನು ಯೋಗ್ಯನಲ್ಲ, ಬದಲಿಗೆ ನೀನು ನನಗೆ ದೀಕ್ಷಾಸ್ನಾನ ಮಾಡಿಸಬೇಕು" ಎಂದು ಹೇಳಿದನು. ಆದರೆ ಯೇಸು, "ನೀನು ನನಗೆ ದೀಕ್ಷಾಸ್ನಾನ ಮಾಡಿಸಬೇಕು, ಯಾಕೆಂದರೆ ಅದುವೇ ಸರಿಯಾದ ಕಾರ್ಯವಾಗಿದೆ" ಎಂದು ಹೇಳಿದನು. ಯೇಸು ಪಾಪಮಾಡದಿದ್ದರೂ ಸಹ ಯೋಹಾನನು ಆತನಿಗೆ ದೀಕ್ಷಾಸ್ನಾನ ಮಾಡಿಸಿದನು.
ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡು ನೀರಿನಿಂದ ಹೊರಗೆ ಬಂದಾಗ, ದೇವರ ಆತ್ಮನು ಪಾರಿವಾಳದ ರೂಪದಲ್ಲಿ ಕಾಣಿಸಿಕೊಂಡು ಆತನ ಮೇಲೆ ಇಳಿದುಬಂದು ಆತನಲ್ಲಿ ನೆಲೆಗೊಂಡನು. ಅದೇ ಸಮಯದಲ್ಲಿ ದೇವರು ಪರಲೋಕದಿಂದ ಮಾತನಾಡಿ , "ನೀನು ನನ್ನ ಮಗನು, ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಾನು ನಿನ್ನನ್ನು ಬಹಳವಾಗಿ ಮೆಚ್ಚಿಕೊಂಡಿದ್ದೇನೆ" ಎಂದು ಹೇಳಿದನು.
ದೇವರು ಯೋಹಾನನಿಗೆ, "ನೀನು ದೀಕ್ಷಾಸ್ನಾನ ಮಾಡಿಸುವ ಒಬ್ಬಾತನ ಮೇಲೆ ಪವಿತ್ರಾತ್ಮನು ಇಳಿದುಬಂದು ನೆಲೆಗೊಳ್ಳುವನು. ಆ ಮನುಷ್ಯನೇ ದೇವರ ಮಗನು" ಎಂದು ಹೇಳಿದ್ದನು. ಒಬ್ಬ ದೇವರು ಮಾತ್ರವೇ ಇರುವನು . ಆದರೆ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸುವಾಗ, ತಂದೆಯಾದ ದೇವರು ಮಾತನಾಡುವುದನ್ನು ಕೇಳಿಸಿಕೊಂಡನು , ಮಗನಾದ ದೇವರನ್ನು ಅಂದರೆ ಯೇಸುವನ್ನು ನೋಡಿದನು ಮತ್ತು ಅವನು ಪವಿತ್ರಾತ್ಮನನ್ನು ನೋಡಿದನು.